ಗುಮ್ಮಾಳಪುರ

	ತಮಿಳುನಾಡಿನ ಸೇಲಂ ಜಿಲ್ಲೆಯ ಹೊಸೂರು ತಾಲ್ಲೂಕಿಗೆ ಸೇರಿದ ಒಂದು ಊರು. ಬೆಂಗಳೂರಿಗೆ ಸು. 48 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಜಿಲ್ಲೆಯ ಅನೇಕಲ್ಲಿಗೆ ಸು. 7 ಕಿ.ಮೀ. ಇರುವ ಗಡಿ ಊರಿದು.

	ಇದು 15-16ನೆಯ ಶತಮಾನಗಳಲ್ಲಿ ತುಂಬ ಪ್ರಸಿದ್ಧಿ ಪಡೆದಿದ್ದು ಪ್ರಖ್ಯಾತ ವೀರಶೈವ ಶರಣರ ಕೇಂದ್ರಗಳಲ್ಲಿ ಒಂದಾಗಿತ್ತೆಂದು ತಿಳಿದು ಬರುತ್ತದೆ. ಮೂರನೆಯ ಶೂನ್ಯ ಸಂಪಾದನೆಕಾರನಾದ ಸಿದ್ಧಲಿಂಗದೇವರ ಜನ್ಮಸ್ಥಳವಿದು. ಇಲ್ಲಿ ಹಲವಾರು ಜೀರ್ಣ ದೇವಾಲಯಗಳೂ ಮಠಗಳೂ ಗವಿಗಳೂ ಇವೆ. ಅವುಗಳಲ್ಲಿ ಸಿದ್ಧಲಿಂಗೇಶ್ವರನ ಮಠ ಇಂದಿಗೂ ಕಂಗೊಳಿಸುತ್ತದೆ. ಇಲ್ಲಿ ಹಲವು ತಾಮ್ರಪಟಗಳು ದೊರೆತಿವೆ. ಒಂದು ತಾಮ್ರ ಶಾಸನದಲ್ಲಿ (ಸು. 1474) ಶಾಂತ ದೇವ, ಚಿಕವೀರದೇವ, ವೀರಣ್ಣ ದೇವ, ನಾಗದೇವ, ಚಿಕ್ಕದೇವಪ್ಪ, ನಿಜಲಿಂಗ ಚಿಕ್ಕಯ್ಯ, ಬಿಟ್ಟಮಂಡೆಯ ಪ್ರಭು, ಶಂಖದ ಸಿದ್ಧಲಿಂಗದೇವ, ಜಂಗುಳಿದೇವ, ಪ್ರಸಾದದೇವ, ಮಲ್ಲಿಕಾರ್ಜುನಾರಾಧ್ಯ, ಬಸವಣ್ಣ ದೇವ, ಇವರೇ ಮುಂತಾದ ಮಹಾ ಶರಣರ ಹೆಸರುಗಳು ಉಲ್ಲೇಖಗೊಂಡಿವೆ. ಅಲ್ಲದೆ ಶಿವತತ್ತ್ವ ಚಿಂತಾಮಣಿ, ವೀರಶೈವಾಮೃತ ಮಹಾಪುರಾಣ ಚನ್ನಬಸವಯ್ಯ ಮೊದಲಾದ ಕಾವ್ಯಗಳಲ್ಲಿಯೂ ಈ ಊರಿನ ಪ್ರಸ್ತಾಪವಿದೆ.

	ಈ ಊರಿನ ಗೌರಮ್ಮ ಬಹಳ ಪ್ರಸಿದ್ಧಿ ಪಡೆದ ದೇವತೆ, ಪ್ರತಿವರ್ಷವೂ ಈ ದೇವತೆಯ ಹೆಸರಿನಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.										(ಬಿ.ಎಸ್.; ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ